ಸಂವಹನ ಕೌಶಲ್ಯ ಉತ್ತಮವಿದ್ದಲ್ಲಿ ಯಶಸ್ಸು ನಿಶ್ಚಿತ

ಸಂವಹನ ಕೌಶಲ್ಯಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಅತ್ಯಂತ ಅವಶ್ಯಕ ಎಂದು ಅಲ್ ಮಹಮದ್ ಬಿಎಡ್ ಕಾಲೇಜಿನ ಪ್ರಾಂಶುಪಾಲ ಡಾ. ಸೋಮಶೇಖರ್ ಹೇಳಿದರು.
ಟೋಸ್ಟ್ ಮಾಸ್ಟರ್ಸ್ ಕ್ಲಬ್ ಕಾರ್ಯಕಾರಿ ಸಮಿತಿ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸಂವಹನ ಕೌಶಲ್ಯ ಉತ್ತಮವಾಗಿದ್ದಲ್ಲಿ ಜೀವನ ಮತ್ತು ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಬಹುದಾಗಿದೆ ಎಂದು ತಿಳಿಸಿದರು.
ಟೋಸ್ಟ್ ಮಾಸ್ಟರ್ಸ್ ಕ್ಲಬ್ ಅಧ್ಯಕ್ಷ ಸಿ.ಎ.ಶರತ್ ಮಾತನಾಡಿ, ಟೋಸ್ಟ್ ಮಾಸ್ಟರ್ಸ್ ಇಂಟರ್ ನ್ಯಾಷನಲ್, ಲಾಭರಹಿತ ಶೈಕ್ಷಣಿಕ ಸಂಸ್ಥೆಯಾಗಿದ್ದು, ಜನರು ಸಂವಹನ, ಸಾರ್ವಜನಿಕ ಭಾಷಣ ಮತ್ತು ನಾಯಕತ್ವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಉದ್ದೇಶಕ್ಕಾಗಿ ವಿಶ್ವಾದ್ಯಂತ ಕ್ಲಬ್‌ಗಳನ್ನು ನಿರ್ವಹಿಸುತ್ತದೆ ಎಂದು ಹೇಳಿದರು.
ಕ್ಲಬ್‌ಗಳಲ್ಲಿ ವಿವಿಧ ರೀತಿಯ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತವೆ. ಪಾಥ್ವೇಸ್ ಪಠ್ಯಕ್ರಮ (ವಿವಿಧ ರೀತಿಯ ಭಾಷಣ ಕಲೆಯನ್ನು ಸುಧಾರಿಸುವುದು), ಭಾಷಣ ಸ್ಪರ್ಧೆ, ಪೂರ್ವಸಿದ್ಧತೆಯಿಲ್ಲದ ಭಾಷಣ, ಹಾಸ್ಯ ಭಾಷಣ ಮತ್ತು ವೇದಿಕೆ ಮೇಲೆ ನಿಂತು ಧೈರ್ಯವಾಗಿ ಮಾತನಾಡಲು ಸಾಮರ್ಥ್ಯ, ನಾಯಕತ್ವದ ಕೌಶಲ್ಯವನ್ನೂ ಸದಸ್ಯರು ಕಲಿಯುತ್ತಾರೆ. ಸಮಯಪಾಲನೆ, ಕಾರ್ಯಕ್ರಮ ನಿರ್ವಹಣೆ, ಭಾಷಣ ಮೌಲ್ಯಮಾಪನ ಹಾಗೂ ಚರ್ಚಾ ಕೌಶಲ್ಯ ಅರಿವು ಮೂಡಿಸಲಾಗುವುದು ಎಂದರು.
ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಮತ್ತು ವ್ಯಾಲಿಯು ಹೆಸರಿನ ಎರಡು ಕ್ಲಬ್ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ಉದ್ಯಮಿಗಳು, ಗೃಹಿಣಿಯರು ಮತ್ತು ವಿವಿಧ ವಲಯದ ಜನರು ಸಂವಹನ ಮತ್ತು ನಾಯಕತ್ವವನ್ನು ಸುಧಾರಿಸಲು ಕ್ಲಬ್‌ಗಳಲ್ಲಿ ಸೇರುವುದು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.
ಸ್ಮಿತಾ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಏರಿಯಾ ಡೈರೆಕ್ಟರ್ ಸಾಧ್ವಿ ಚಂದ್ರಕಾಂತ್ ಕ್ಲಬ್ ಅಧಿಕಾರಿಗಳ ಪ್ರಮಾಣ ವಚನ ನಿರ್ವಹಿಸಿದರು. ಪ್ರಮುಖವಾಗಿ ಬೋಧನಾ ಸಿಬ್ಬಂದಿಯಲ್ಲಿ ಕೌಶಲ್ಯಗಳ ಮಹತ್ವದ ಬಗ್ಗೆ ಚರ್ಚಿಸಲಾಯಿತು. ಡಿವಿಷನ್ ಡೈರೆಕ್ಟರ್ ಅಜಯ್ ಪಾಳೇಗಾರ್ ಸಾರ್ವಜನಿಕ ಭಾಷಣದ ಮಹತ್ವದ ಕುರಿತು ಮಾತನಾಡಿದರು.
ನೂತನವಾಗಿ ಆಯ್ಕೆಯಾದ ಕ್ಲಬ್ ಅಧ್ಯಕ್ಷ ಸಿ.ಎ.ಶರತ್ ಮತ್ತು ಡಾ. ತಾಜ್ ಅವರು ವರ್ಷದ ಶೈಕ್ಷಣಿಕ ಯೋಜನೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಲಬ್ ಸದಸ್ಯರು ಮತ್ತು ಅತಿಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *