ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ಪ್ರತಿಭೆ ಅನಾವರಣ : ಶಾಂತಶೆಟ್ಟಿ

ಯಾವುದೇ ಸ್ಪರ್ಧೆಯಾಗಲಿ ಸೋಲು – ಗೆಲುವು ಮುಖ್ಯವಲ್ಲ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯ. ನಮ್ಮಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಚಿಂತನ ಯೋಗ, ಸಂಗೀತ ಟ್ರಸ್ಟ್ ನ ಜಿಲ್ಲಾ ಅಧ್ಯಕ್ಷೆ ಶಾಂತಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಥುರಾ ಪ್ಯಾರಡೈಸ್ 25 ರ ಬೆಳ್ಳಿ ಹಬ್ಬದ ಅಂಗವಾಗಿ ಮಥುರಾ ಸಭಾಂಗಣದಲ್ಲಿ ದೇಶಭಕ್ತಿ ಗೀತೆ, ದೇಶ, ನಾಡು, ನುಡಿ, ಜಲದ ಬಗ್ಗೆ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಬೆಳ್ಳಿ ಹಬ್ಬ ಸಮಿತಿಯ ನಿರ್ದೇಶಕ ಜಿ.ವಿಜಯ್ ಕುಮಾರ್ ಮಾತನಾಡಿ, ಸಂಗೀತಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಇದನ್ನು ಚೆನ್ನಾಗಿ ಅಭ್ಯಾಸ ಮಾಡಿ, ಹಾಡುಗಳನ್ನು ಅನುಭವಿಸಿ ಹಾಡಬೇಕು. ಈ ಜಿಲ್ಲೆ ಈ ಕ್ಷೇತ್ರ ಸಾಧನೆ ಮಾಡಿದ ದಿಗ್ಗಜರ ತವರೂರು ಶಿವಮೊಗ್ಗ ಎಂದು ನುಡಿದರು.

ಬೆಳ್ಳಿ ಹಬ್ಬ ಸಮಿತಿಯ ಕಾರ್ಯದರ್ಶಿ ಎಸ್.ಎಸ್.ವಾಗೀಶ್ ಮಾತನಾಡಿ, ಈಗಾಗಲೇ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮಗಳು ನಿರಂತರವಾಗಿ ಜನಮಾನಸ ತಲುಪುತ್ತಿವೆ. ಇಂತಹ ಕಾರ್ಯಕ್ರಮಗಳಲ್ಲಿ ಸದಸ್ಯರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭದ್ರಾವತಿ ವಾಸು ಮಾತನಾಡಿ, ನಮ್ಮ ದೇಶ, ನೆಲ, ಜಲ, ನಾಡು, ನುಡಿ ಬಗ್ಗೆ ನಮಗೆ ಗೌರವ ಇರಬೇಕು.
ಈ ನಿಟ್ಟಿನಲ್ಲಿ ಇಂದು ನಮ್ಮ ಸದಸ್ಯರು ಇಂತಹ ಅಭೂತಪೂರ್ವ ಹಾಡುಗಳನ್ನು ಆಯ್ಕೆ ಮಾಡಿ, ತುಂಬಾ ವಿಶೇಷವಾಗಿ ಹಾಡಿ ಅಪಾರ ಜನ ಮೆಚ್ಚುಗೆ ಗಳಿಸಿದ್ದಾರೆ ಎಂದರು.

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಅನೂಪ್ ಶಿವಮೊಗ್ಗ, ದ್ವಿತೀಯ ಬಹುಮಾನ ಏಳುಮಲೈ, ತೃತೀಯ ಬಹುಮಾನ ಸುನೀಲ್ ಎಸ್ ಕಾಮತ್ ಹಾಗೂ ಸಮಾದಾನಕರ ಬಹುಮಾನ ಹೇಮಂತ್ ಶೇಟ್ ಶಿವಮೊಗ್ಗ ಇವರಿಗೆ ನೀಡಲಾಯಿತು.

ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಆಧ್ಯಾ ಹೊಸನಗರ, ರಾಜಶೇಖರ್ ಪಾಲ್ಗೊಂಡಿದ್ದರು. ಆ.ನ.ವಿಜಯೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *